ಬೌದ್ಧಧರ್ಮದ ಮಹಾಯಾನ ಪಂಗಡಕ್ಕೆ ಸೇರಿದ ವಿದ್ವಾಂಸ. ಬಹುಶಃ ಪ್ರಶ.ಸು. 7ನೆಯ ಶತಮಾನದ ಪುರ್ವಾರ್ಧದಲ್ಲಿ ಇದ್ದವನೆಂದು ವಿದ್ವಾಂಸರ ಅಭಿಪ್ರಾಯ. ಪ್ರಸಿದ್ಧ ವಿದ್ವಾಂಸ ಸತೀಶಚಂದ್ರ ವಿದ್ಯಾಭೂಷಣ ಈತನನ್ನು ಶ್ರೀ ಶಂಕರಾಚಾರ್ಯರ ಸಮಕಾಲೀನನೆಂದು ಭಾವಿಸುತ್ತಾನೆ.
ಈತನ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಆದ್ದರಿಂದಲೇ ವಿದ್ವಾಂಸರಲ್ಲಿ ಈತನ ಬಗ್ಗೆ ಭಿನ್ನಾಭಿಫ್ರಾಯವಿದೆ. ಬೌದ್ಧ ವಿದ್ವಾಂಸ ಆರ್ಯದೇವ ಈತನೇ ಎಂದು ಈವರೆಗೂ ಭಾವಿಸಲಾಗಿತ್ತು. ಆದರೆ ಇತ್ತೀಚೆಗೆ ಇದನ್ನು ನಿರಾಕರಿಸಲಾಗಿದೆ. ಏಕೆಂದರೆ ಚಂದ್ರಕೀರ್ತಿಯೇ ಆರ್ಯದೇವನನ್ನೂ ಮತ್ತು ಆತನ ಗ್ರಂಥಗಳಾದ ಶತಕ-ಚತುಶತಕ, ಶತಕಶಾಸ್ತ್ರ ಮತ್ತು ಆರ್ಯಪದೀಯಗಳನ್ನು ತನ್ನ ಗ್ರಂಥವಾದ ಮಾಧ್ಯಮಿಕವೃತ್ತಿ ಎನ್ನುವ ಗ್ರಂಥದಲ್ಲಿ ಸ್ಮರಿಸಿದ್ದಾನೆ.

ಚಂದ್ರಕೀರ್ತಿ ಬರೆದ ಮತ್ತೊಂದು ಸ್ವತಂತ್ರ ಗ್ರಂಥವೆಂದರೆ ಮಾಧ್ಯಮಿಕಾವತಾರ. ಇದು ಮೂಲದಲ್ಲಿ ಸಂಸ್ಕೃತ ಗ್ರಂಥ; ಈಗ ಲಭ್ಯವಾಗಿರುವುದು ಟಿಬೆಟನ್ ಲಿಪಿಯಲ್ಲಿ. ಮಹಾಯಾನ ಬೌದ್ಧಮತದ ವಿಚಾರವಾಗಿ ಈ ಗ್ರಂಥ ಅಧಿಕೃತವಾಣಿಯಿಂದ ಹೇಳುವುದಲ್ಲದೆ ಆ ಮತದ ಅಧ್ಯಯನಕ್ಕೆ ಈ ಗ್ರಂಥ ಅತ್ಯುತ್ತಮ ಪ್ರಸ್ತಾವನೆಯಾಗಿದೆ ಎಂದು ವಿದ್ವಾಂಸರ ಅಭಿಪ್ರಾಯ. ಈತನ ಮತ್ತೊಂದು ಗ್ರಂಥ ನಾಗಾರ್ಜುನನ ಮಾಧ್ಯಮಿಕ ಸೂತ್ರಗಳ ಮೇಲಿನ ಪ್ರಪನ್ನಪದ ಎನ್ನುವ ಸಂಸ್ಕೃತ ಭಾಷ್ಯ.	(ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ